03/05/2022
* #ಅಕ್ಷಯಾ_ತೃತೀಯ_ಮೂಢನಂಬಿಕೆ_ಬೇಡ*
ಜೈನ ಧರ್ಮದ ಪರ್ವಗಳೇ ಹಾಗೇ, ಭೋಗಕ್ಕೆ ಮರುಳಾಗದೇ , ವಿಲಾಸಕ್ಕೆ ಒಲಿಯದೇ , ವ್ರತ ಉಪವಾಸಾದಿಗಳ ಮೂಲಕ ಭಗವಂತನ ಗುಣಗಳಲ್ಲಿ ಅನುರಕ್ತವಾಗುವುದೇ ಜೈನ ಧರ್ಮದ ಪರ್ವಗಳ ಉದ್ದೇಶವಾಗಿದೆ.
ಇಂದು ಅಕ್ಷಯ ತೃತೀಯ ದಿನವಾಗಿದೆ. ಪ್ರಥಮ ತೀರ್ಥಂಕರ ಭಗವಾನ್ ಆದಿನಾಥರಿಗೆ ಮುನಿ ಅವಸ್ಥೆಯಲ್ಲಿ ಶ್ರೇಯಾಂಸ ಮಹಾರಾಜ ಇಕ್ಷುರಸವನ್ನು ( ಕಬ್ಬಿನ ಹಾಲು ) ಆಹಾರ ರೂಪದಲ್ಲಿ ನೀಡಿದ ದಿನವಿದು. ಇದು ಈ ಯುಗದ ಪ್ರಪ್ರಥಮ ಮುನಿಗಳ ಆಹಾರ ವಿಧಿ. ಅಂದಿನಿಂದ ಇಂದಿನವರೆಗೆ ಅಸಂಖ್ಯಾತ ಮುನಿ ಮಹಾರಾಜರುಗಳಿಗೆ ಶ್ರಾವಕರು ಭಕ್ತಿ ಭಾವದಿಂದ ವಿವಿಧ ಬಗೆಯ ದ್ರವ್ಯಗಳನ್ನು ಆಹಾರವಾಗಿ ನೀಡಿದ್ದಾರೆ. ಪ್ರಥಮ ಆಹಾರದ ದಿನವೇ ಅಕ್ಷಯ ತೃತೀಯ. ಪ್ರಥಮ ಆಹಾರವನ್ನು ನೀಡಿದ ಶ್ರೇಯಾಂಸ ಮಹಾರಾಜನಿಗೆ ದೇವತೆಗಳಿಂದ ಪಂಚಾಶ್ಚರ್ಯವಾಯಿತು. ರತ್ನಗಳ ವೃಷ್ಟಿ, ದುಂದುಭಿ ವಾದ್ಯ, ಮಂದ ಸುಗಂಧಿತ ಗಾಳಿಯ ಸಂಚಾರ, , ಜಯಕಾರದ ಧ್ವನಿ, ಆಕಾಶದಿಂದ ಪುಷ್ಪವೃಷ್ಟಿ ಇವುಗಳು ದೇವತೆಗಳಿಂದ ಆಗಲ್ಪಡುತ್ತದೆ. ಈ ಪ್ರಸಂಗ ಎಲ್ಲಾ ಆಹಾರ ದಾನಗಳಲ್ಲಿ ಆಗುವುದಿಲ್ಲ. ಪಂಚಮ ಕಾಲದಲ್ಲಿ ಈ ಪಂಚಾಶ್ಚರ್ಯಗಳು ನಡೆಯುವುದೇ ಇಲ್ಲ.ಆದರೆ ಭಾರಿ ಪುಣ್ಯದ ಪ್ರಾಪ್ತಿಯಿದೆ. ಹಾಗೂ ಕರ್ಮ ನಿರ್ಜರೆಗೆ ನಿಮಿತ್ತವಾಗುತ್ತದೆ. ಪ್ರತಿಫಲಾಕ್ಷೆಯಿಂದ ಮುನಿಗಳಿಗೆ ಆಹಾರ ದಾನ ಮಾಡದೇ ಶೃದ್ಧೆಯಿಂದ, ನಿರ್ಮಲ ಭಾವದಿಂದ ಮುನಿಗಳಿಗೆ ಆಹಾರ ದಾನ ಮಾಡಿದರೆ ಸ್ವರ್ಗ ಪ್ರಾಪ್ತಿಯಾಗುತ್ತದೆ.
* #ಬಂಗಾರ_ಖರೀದಿಯಿಂದ_ಅಕ್ಷಯವಾಗುವುದಿಲ್ಲ*
ಇತ್ತೀಚೆಗೆ ಕೆಲವು ಸಂದರ್ಭಗಳಲ್ಲಿ ನಮ್ಮ ಆಚರಣೆಗಳು ದಾರಿ ತಪ್ಪುತ್ತವೆ. ಅದರಲ್ಲಿ ಪ್ರಮುಖವಾದದ್ದು ಅಕ್ಷಯಾ ತೃತೀಯಾ ದಿನದಂದು ಬಂಗಾರ ಖರೀದಿ ಮಾಡಿದರೆ ಬದುಕು ಬಂಗಾರವಾಗುತ್ತದೆ, ಹಾಗೂ ಭೋಗದ ಸಂಪತ್ತು ವೃದ್ಧಿಯಾಗುತ್ತದೆ ಎಂಬ ಅವೈಜ್ಞಾನಿಕ ತಿಳುವಳಿಕೆ ಜನರಲ್ಲಿ ಪ್ರಚಲಿತದಲ್ಲಿದೆ. ಇಲ್ಲಿ ನಾವು ಗಮನಿಸಬೇಕಾದದ್ದು ಜೈನ ಧರ್ಮದ ತತ್ವ ಸಿದ್ಧಾಂತಗಳು ಭೋಗಕ್ಕೆ ಮಹತ್ವ ಕೊಡುವುದಿಲ್ಲ. ಬದಲಾಗಿ ಅದು ಆತ್ಮೋನ್ನತಿಯ ನಿಮಿತ್ತವಾಗಿವೆ. ಜೈನೇತರ ದರ್ಶನದ ಪ್ರಭಾವದಿಂದ ಜೈನರು ಅಕ್ಷಯಾ ತೃತೀಯ ದಿನದಂದು ಚಿನ್ನ ಖರೀದಿ ಮಾಡಿದರೆ ಬದುಕು ಚಿನ್ನವಾಗುತ್ತದೆ , ಸಂಪತ್ತು ವೃದ್ಧಿಯಾಗುತ್ತದೆ ಎಂಬ ಭ್ರಮೆಗೆ ಒಳಗಾಗಿ ಅಕ್ಷಯಾ ತೃತೀಯಾದ ಮಹತ್ವವನ್ನು ಅಪಮೌಲ್ಯಗೊಳಿಸುತ್ತಿದ್ದಾರೆ. ಬಂಗಾರ ಖರೀದಿ ಮಾಡಿದರೆ ಅಲ್ಪ ಸುಖವನ್ನು ಅನುಭವಿಸಬಹುದು ಆದರೆ ನಂತರ ಅದನ್ನು ಕಾಪಾಡಿಕೊಳ್ಳುವ ಚಿಂತೆಯಲ್ಲೇ ಕಳೆಯಬೇಕಾಗುತ್ತದೆ. ಭೋಗ ಸಂಪತ್ತು ವೃದ್ಧಿಯಾಗಿಲ್ಲವೆಂದು ಮಾನಸಿಕ ಕ್ಷೋಭೆಗೆ ಒಳಗಾಗಬೇಕಾಗುತ್ತದೆ.
ಭೋಗ ವಿಲಾಸಗಳಿಗೆ ಮಹತ್ವ ಕೊಡದೇ ಆತ್ಮೋನ್ನತಿಗೆ ನಾವುಗಳು ಮುಂದಾಗುತ್ತಾ ಜೈನ ದರ್ಶನದ ಪ್ರಕಾರ ಸಮ್ಯಗ್ದರ್ಶನದ ಮಹತ್ವಕ್ಕೆ ತಲೆ ಬಾಗುತ್ತಾ ಆತ್ಮ ಸುಖದಲ್ಲಿ ರಮಣ ಮಾಡುವತ್ತ ಚಿಂತಿಸಬೇಕಾಗಿದೆ, ಹೆಜ್ಜೆ ಹಾಕಬೇಕಾಗಿದೆ.
* #ನಿರಂಜನ್_ಜೈನ್_ಕುದ್ಯಾಡಿ*