
31/05/2024
ಕನ್ನಡ ವಿಶ್ವವಿದ್ಯಾಲಯ, ಹಂಪಿ
ರಾಮಮನೋಹರ ಲೋಹಿಯಾ ಅಧ್ಯಯನ ಪೀಠ
ಮತ್ತು ಪ್ರಸಾರಾಂಗದ ಸಹಯೋಗದಲ್ಲಿ
ಕರಡು ತಿದ್ದುಪಡಿ ಮತ್ತು ಪುಟವಿನ್ಯಾಸ ಕಾರ್ಯಾಗಾರ
೨೦ ರಿಂದ ೨೪ ಮೇ ೨೦೨೪ರ ಐದು ದಿನಗಳವರೆಗೆ
ಕಾರ್ಯಾಗಾರದ ಪತ್ರಿಕಾ ಪ್ರಕಟಣೆ-೨೦.೫.೨೦೨೪
ಸಂಶೋಧನೆಯಲ್ಲಿ ಕರಡುತಿದ್ದುಪಡಿಯೂ ಪ್ರಮುಖ ಘಟ್ಟ : ಡಾ.ಡಿ.ವಿ.ಪರಮಶಿವಮೂರ್ತಿ
ಸಂಶೋಧನೆಯ ವಿದ್ವತ್ ಲೋಕದಲ್ಲಿ ಹೊಸ ವಿಷಯಗಳ ಚಿಂತನೆಯಷ್ಟೇ, ಬರವಣಿಗೆ ಮತ್ತು ಅದರ ಪರಿಷ್ಕರಣೆಯೂ ತುಂಬಾ ಮುಖ್ಯವಾಗಿದ್ದು, ಸಂಶೋಧನೆಯಲ್ಲಿ ಕರಡುತಿದ್ದುಪಡಿಯೂ ಪ್ರಮುಖವಾದ ಘಟ್ಟವಾಗಿದೆ ಎಂದು ಕನ್ನಡ ವಿಶ್ವವಿದ್ಯಾಲಯದ ಮಾನ್ಯ ಕುಲಪತಿಗಳಾದ ಡಾ.ಡಿ.ವಿ.ಪರಮಶಿವಮೂರ್ತಿ ಅವರು ಅಭಿಪ್ರಾಯಪಟ್ಟರು.
ಕನ್ನಡ ವಿಶ್ವವಿದ್ಯಾಲಯದ ಪಂಪ ಸಭಾಂಗಣದಲ್ಲಿ ದಿನಾಂಕ ೨೦.೫.೨೦೨೪ರಂದು ರಾಮಮನೋಹರ ಲೋಹಿಯಾ ಅಧ್ಯಯನ ಪೀಠ ಮತ್ತು ಪ್ರಸಾರಾಂಗದ ಸಹಯೋಗದಲ್ಲಿ ಆಯೋಜಿಸಿದ್ದ ಐದು ದಿನಗಳ(೨೦ ರಿಂದ ೨೪ ಮೇ ೨೦೨೪ರವರೆಗೆ)ವರೆಗೆ ಕರಡು ತಿದ್ದುಪಡಿ ಮತ್ತು ಪುಟವಿನ್ಯಾಸ ಕಾರ್ಯಾಗಾರದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಸಂಶೋಧನಾ ಬರವಣಿಗೆಯಲ್ಲಿ ವ್ಯಾಕರಣ ದೋಷಗಳಾಗದಾಗ, ವಿಷಯದ ಅರ್ಥವ್ಯತ್ಯಾಸವಾಗುವುದು. ಇದರಿಂದ ಪರಿಣಾಮಕಾರಿ ಸಂವಹನ ಸಾಧ್ಯವಾಗುವುದಿಲ್ಲ. ಸಂಶೋಧನಾ ವಿದ್ಯಾರ್ಥಿಗಳು ತಮ್ಮ ಮಹಾಪ್ರಬಂಧವನ್ನು ವಿಶ್ವವಿದ್ಯಾಲಯಕ್ಕೆ ಸಲ್ಲಿಸಿದಾಗ ಹೆಚ್ಚಿನ ಮೌಲ್ಯಮಾಪಕರು ಈ ಮಹಾಪ್ರಬಂಧದಲ್ಲಿ ಅಕ್ಷರ ದೋಷಗಳಿವೆ ಎಂದು ವರದಿ ಬರೆಯುತ್ತಾರೆ. ಇತರೆ ವಿಶ್ವವಿದ್ಯಾಲಯಗಳ ಸಂಶೋಧನಾ ಪ್ರಬಂಧಗಳಲ್ಲಿ ತಪ್ಪುಗಳಾದರೆ ಹೋಗಲಿ ಎಂದು ಹೇಳಬಹುದು. ಕನ್ನಡ ಭಾಷೆ, ಸಂಸ್ಕೃತಿಯನ್ನು ಮೈಗೂಡಿಸಿಕೊಂಡಿರುವ ಕನ್ನಡ ವಿಶ್ವವಿದ್ಯಾಲಯದ ಸಂಶೋಧನೆಗಳಲ್ಲಿ ಅಕ್ಷರ ದೋಷಗಳು, ವಾಕ್ಯದೋಷಗಳಾದರೆ ಅದರಿಂದ ವಿಶ್ವವಿದ್ಯಾಲಯದ ಘನತೆಗೆ ಚ್ಯುತಿ ಬರುತ್ತದೆ. ಇನ್ನು ಮುಂದಿನ ದಿನಗಳಲ್ಲಿ ಸಂಶೋಧನಾರ್ಥಿಗಳು ತಮ್ಮ ಮಹಾಪ್ರಬಂಧವನ್ನು ತಾವೇ ಕರಡು ತಿದ್ದುಪಡಿ ಮಾಡಿ, ಪುಟವಿನ್ಯಾಸ ಮಾಡಲು ಈ ಕಾರ್ಯಾಗಾರವು ಸಹಕಾರಿಯಾಗಲಿದೆ. ಇದರ ಪೂರ್ಣ ಪ್ರಯೋಜನವನ್ನು ವಿದ್ಯಾರ್ಥಿಗಳು ಪಡೆಯಬೇಕೆಂದು ಕಿವಿಮಾತು ಹೇಳಿದರು.
ಪ್ರಸಾರಾಂಗದ ನಿರ್ದೇಶಕರಾದ ಡಾ.ಮಾಧವ ಪೆರಾಜೆ ಅವರು ಮಾತನಾಡುತ್ತ ಸಂಶೋಧನಾರ್ಥಿಗಳು ತಮ್ಮ ಸಂಶೋಧನೆಯ ಮಹಾಪ್ರಬಂಧವನ್ನು ಕರಡು ತಿದ್ದುಪಡಿ ಮಾಡಲು ಇತರರಿಗೆ ಹಣಕೊಟ್ಟು ಮಾಡಿಸುವುದರ ಬದಲು ತಾವೇ ಮಾಡುವುದು ಒಳ್ಳೆಯದು. ಇದರಿಂದ ಸಂಶೋಧನ ಪ್ರಬಂಧಗಳ ಗುಣಮಟ್ಟವನ್ನು ಕಾಪಾಡಬಹುದು ಎಂದು ತಿಳಿಸಿದರು.
ರಾಮಮನೋಹರ ಲೋಹಿಯಾ ಅಧ್ಯಯನ ಪೀಠದ ಸಂಚಾಲಕರಾದ ಡಾ.ಯರ್ರಿಸ್ವಾಮಿ ಅವರು ಗಣ್ಯರನ್ನು ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಸಂಶೋಧನಾ ವಿದ್ಯಾರ್ಥಿ ಮೋಹನ್ಕುಮಾರ್ ನಿರೂಪಿಸಿದರು. ವಿರುಪಾಕ್ಷ ಕೆ. ವಂದಿಸಿದರು. ಈ ಸಂದರ್ಭದಲ್ಲಿ ಪ್ರಾಧ್ಯಾಪಕರು, ಬೋಧಕೇತರ ಸಿಬ್ಬಂದಿಗಳು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.